.
ವಿಟ್ಲ: ಇಲ್ಲಿಯ ಜನತೆಯ ಬಹುವರ್ಷದ ಬೇಡಿಕೆಯಾಗಿದ್ದ ವಿಟ್ಲ ಪೇಟೆ ರಸ್ತೆ ವಿಸ್ತರಣೆ ಯೋಜನೆಗೆ ರಾಜ್ಯ ಸರ್ಕಾರದಿಂದ ೨ ಕೋಟಿ ರೂಪಾಯಿ ಅನುದಾನವಾಗಿದ್ದರೂ ಕೂಡ ಇಲಾಖೆಯ ಅಧಿಕಾರಿಗಳು ಟೆಂಡರ್ ಕರೆಯಲು ಮೀನಾಮೇಷ ಎಣಿಸುತ್ತಿದ್ದು, ಇದರಿಂದ ಇಲ್ಲಿಯ ಜನತೆ ರೋಸಿ ಹೋಗಿದ್ದಾರೆ.
ರಸ್ತೆಯ ಮಧ್ಯದಿಂದ ೧೬.೫, ೧೬.೫ರಂತೆ ಒಟ್ಟು ೩೩ ಅಡಿ ಉದ್ದಕ್ಕೆ ರಸ್ತೆಯನ್ನು ಅಗಲೀಕರಣಗೊಳಿಸಲು ಇಲಾಖೆ ಈ ಹಿಂದೆಯೇ ಯೋಜನೆ ರೂಪಿಸಿದ್ದು, ಅದಕ್ಕಾಗಿ ವಿಟ್ಲದ ಕಲ್ಲಕಟ್ಟ ಸೇತುವೆಯಿಂದ ಶಾಲಾ ರಸ್ತೆಯ ಅತಿಥಿ ಗೃಹದ ವರೆಗೆ ರಸ್ತೆ ವಿಸ್ತರಣೆ ಮಾಡಲು ಈಗಾಗಲೇ ಸರ್ಕಾರದಿಂದ ೨ಕೋಟಿ ರೂಪಾಯಿ ಅನುದಾನವಾಗಿದೆ ಎಂದು ಸರ್ಕಾರದ ಸಂಬಂಧಪಟ್ಟ ಇಲಾಖೆ ಅಧಿಕೃತವಾಗಿ ಹೇಳುತ್ತಿದೆ. ಆದರೆ ಇದು ಹೇಳಿ ವರ್ಷ ಒಂದು ಆದರೂ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ.
ಪ್ರತಿದಿನ ಟ್ರಾಫಿಕ್ ಕಿರಿಕಿರಿ:
ವಿಟ್ಲ ಪೇಟೆಯಲ್ಲಿ ಪ್ರತಿದಿನ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು, ಇದರಿಂದ ಇಲ್ಲಿಯ ಜನತೆ ರೋಸಿ ಹೋಗಿದ್ದಾರೆ. ಮಂಗಳವಾರ ವಾರದ ಸಂತೆವಾಗಿದ್ದರಿಂದ ಇಲ್ಲಿ ಜನರಿಗೆ ಓಡಾಡಲು ಪರದಾಡುವಂತಹ ಪರಿಸ್ಥಿತಿ ನಿರ್ಮಾವಾಗುತ್ತಿದ್ದು, ಪೇಟೆಯ ಖಾಸಗಿ ಬಸ್ ನಿಲ್ದಾಣದೊಳಗೆ ಇಕ್ಕಾಟ್ಟಿನಿಂದ ಕೂಡಿದ ಪರಿಣಾಮ ಅವಘಾಡಗಳು ಸಂಭವಿಸುತ್ತಲೇ ಇರುತ್ತದೆ. ಸಂಜೆ ವೇಳೆ ಶಾಲಾ ಕಾಲೇಜು ಬಿಡುವ ಹೊತ್ತಿನಲ್ಲಿ ವಿಟ್ಲ ಪೇಟೆಯ ಟ್ರಾಫಿಕ್ಗೆ ವಿದ್ಯಾರ್ಥಿಗಳು ಸಿಕ್ಕಿಹಾಕಿ ಹೊದ್ದಡುತ್ತಿದ್ದಾರೆ. ಬೆಳಿಗ್ಗೆ ಹಾಗೂ ಸಂಜೆ ಹೊತ್ತುಗಳಲ್ಲಿ ಇಲ್ಲಿಯ ವಾಹನ ಚಾಲಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿದಿನಲೂ ನರಕಯಾತನೇ ಅನುಭವಿಸುತ್ತಿದ್ದಾರೆ. ಒಂದೇ ಸಮಯಕ್ಕೆ ಎದುರು ಬದುರಾಗಿ ವಾಹನಗಳು ರಸ್ತೆಯಲ್ಲಿ ಸಂಚಾರಿಸಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಸಂಚಾರಿಸಿದರೆ ಪರಸ್ಪರ ವಾಹನಗಳು ಸವಾರಿ ದಿನಪೂರ್ತಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ.
ವಿಸ್ತರಣೆಗೆ ವಿರೋಧ: ವಿಟ್ಲ ಕೆಲ ವರ್ತಕರು ಸ್ವತ: ತಮ್ಮ ಅಂಗಡಿಗಳ ಅರ್ಧ ಭಾಗವನ್ನು ರಸ್ತೆ ವಿಸ್ತರಣೆಗೆ ಬಿಟ್ಟುಕೊಟ್ಟಿದ್ದು, ನಾಲ್ಕು ಮಾರ್ಗ ಜಕ್ಷನ್ನಲ್ಲಿ ಬೆರಳೆಣಿಕೆಯಷ್ಟು ಅಂಗಡಿ ಮಾಲೀಕರು ತಮ್ಮ ಅಂಗಡಿಯನ್ನು ಬಿಟ್ಟು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸತತ ಮೂರು ಭಾರೀ ವಿಟ್ಲಕ್ಕೆ ಭೇಟಿ ನೀಡಿ ಅಂಗಡಿ ಮಾಲೀಕರೊಂದಿಗೆ ಮಾತುಕತೆ ನಡೆಸಿದ್ದು, ಈ ಸಮಸ್ಯೆ ಅನ್ನು ಸೌಹರ್ದವಾಗಿ ಬಗೆಹರಿಸಲು ಕರೆ ನೀಡಿದ್ದರು. ಅದು ಕಳೆದು ವರ್ಷ ಒಂದು ಕಳೆದರೂ ರಸ್ತೆ ವಿಸ್ತರಣೆ ಮಾತ್ರ ವಿಟ್ಲದ ಜನತೆಗೆ ಕನಸ್ಸಾಗಿಯೇ ಉಳಿದಿದೆ.
ಅಧಿಕಾರಿಗಳು ಏನು ಹೇಳುತ್ತಾರೆ?: (ಇದನ್ನು ಬಾಕ್ಸ್ ಮಾಡಬಹುದು)
ಇತ್ತೀಚೆಗೆ ವಿಟ್ಲ-ಸಾರಡ್ಕ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಭೇಟಿ ನೀಡಿದ್ದ ಎಕ್ಸಿಕ್ಯುಟಿವ್ ಎಂಜಿನಿಯರ್ ಅವರು ವಿಟ್ಲ ಅಂಗಡಿ ಮಾಲೀಕರ ಸಭೆ ಕರೆದು ಇನ್ನೂ ಕೂಡ ರಸ್ತೆ ವಿಸ್ತರಣೆಗೆ ತಮ್ಮ ಅಂಗಡಿಗಳನ್ನು ಬಿಟ್ಟು ಕೊಡದವರೊಂದಿಗೆ ಮಾತುಕತೆ ನಡೆಸಿ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ಕಳೆದ ಹಲವಾರು ತಿಂಗಳುಗಳಿಂದ ಇದೇ ರೀತಿಯ ಹಾರೈಕೆಯ ಮಾತುಗಳನ್ನು ಇಲಾಖೆಯ ಅಧಿಕಾರಿ ಹೇಳುತ್ತಿದ್ದು, ಇದೂವರೆಗೂ ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಇಲಾಖೆಯ ಯೋಜನೆಗಳು:
ಅತೀ ಕಿರಿದಾದ ವಿಟ್ಲ ಪೇಟೆಯ ರಸ್ತೆಗಳಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ರಸ್ತೆ ಮಧ್ಯದಿಂದ ೧೬.೫, ಅಡಿ ರಸ್ತೆಯನ್ನು ಅಗಳಗೊಳಿಸಬೇಕು. ನಾಲ್ಕು ಮಾರ್ಗ ಜಕ್ಷನ್ನಲ್ಲಿ ವೃತ್ತ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುಮಾಡಿಕೊಟ್ಟರೆ, ಹಾಗೂ ರಸ್ತೆ ಬದಿಗಳಲ್ಲಿ ಚರಂಡಿಗಳನ್ನು ರಚಿಸಲಾಗುವುದು. ಇದರಿಂದ ವಿಟ್ಲದ ಪೇಟೆಯಲ್ಲಿ ಸಂಭವಿಸುತ್ತಿದ್ದ ದಟ್ಟನೆಯ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಬಹುದು ಎಂಬ ಯೋಜನೆಗಳನ್ನು ಅವರು ರೂಪಿಸುತ್ತಿದ್ದು, ಆದರೆ ಅದು ಮಾತ್ರ ಅನುಷ್ಠಾನಕ್ಕೆ ಇದೂವರೆಗೂ ಬರಲಿಲ್ಲ?
ವಿಟ್ಲ ವಿಧಾನ ಸಭಾ ಕ್ಷೇತ್ರವು ಪುತ್ತೂರು ಕ್ಷೇತ್ರಕ್ಕೆ ಹಂಚಿ ಹೋಗಿದ್ದರಿಂದ ಇದರ ಅಭಿವೃದ್ಧಿ ಕೂಡ ಅದರ ಜತೆಗೆ ಹೋಗಿದೆ ಎಂದು ಇಲ್ಲಿಯ ಗ್ರಾಮಸ್ಥರು ಹೇಳುತ್ತಿದ್ದಾರೆ. ಇನ್ನೂ ಕೆಲ ತಿಂಗಳಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಯುವ ಸಾಧ್ಯತೆ ಕೂಡ ಇದೆ. ಈ ಸಂದರ್ಭ ಲಕ್ಷಾಂತರ ಜನರು ವಿಟ್ಲ ಪೇಟೆ ಮೂಲಕವೇ ದೇವಸ್ಥಾನಕ್ಕೆ ಹಾದು ಹೋಗಬೇಕಾಗಿದೆ. ಈ ಸಂದರ್ಭ ದಟ್ಟನೆಯ ಟ್ರಾಫಿಕ್ ಆಗುವ ಸಂಭವ ಹೆಚ್ಚು ಇದೆ. ಇನ್ನಾದರೂ ಸಂಬಂಧಪಟ್ಟ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಪಕ್ಷದ ನಾಯಕರು, ಊರಿನ ಹಿರಿಯರು ವಿಟ್ಲ ಪೇಟೆ ಅಭಿವೃದ್ಧಿ ಬಗ್ಗೆ ಮೇಲಾಧಿಕಾರಿಗಳಿಗೆ ಒತ್ತಡ ಹಾಕದಿದ್ದರೆ ಈ ಯೋಜನೆ ಜನರಿಗೆ ಕನಸ್ಸಾಗಿಯೇ ಉಳಿವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವಾಗಿ ಅಂಗಡಿ ಮಾಲೀಕರ ಸಭೆ ಕರೆದು, ಬಳಿಕ ಈ ಯೋಜನೆಗೆ ಟೆಂಡರ್ ಕರೆಯಬೇಕೆಂದು ಪ್ರಜ್ಞಾವಂತ ನಾಗರಿಕರು ಹೇಳಿದ್ದಾರೆ.